Friday 21 October 2011

ಕಾಶ್ಮೀರಿ ಪಂಡಿತರ ನೋವಿನ ಕಥೆ : ಒಂದು ಉತ್ತಮ ಲೇಖನ


ತಮ್ಮ ಸ್ವಂತ ದೇಶದಲ್ಲೇ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ಕಳೆದ 20 ವರ್ಷಗಳಿಂದ ದೆಹಲಿಯ ಸ್ಲಂ ಗಳಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಗತ್ತಿನ ಸಕಲರಿಗೂ ಆಶ್ರಯ ನೀಡಿರುವ ಈ ಮಹಾನ್ ದೇಶದಲ್ಲಿ ನಮ್ಮವರೇ ಆದ ಕಾಶ್ಮೀರಿ ಪಂಡಿತರಿಗಾಗಿ ಮಿಡಿವ ಮನಸುಗಳೆಲ್ಲಿವೆ ? ಕಾಶ್ಮೀರಿ ಸಂತ್ರಸ್ತೆ ಸುನಂದಾ ವಶಿಷ್ಟ ತಮ್ಮ ಭಾವ ನೋವುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

(ಕನ್ನಡ ಪ್ರಭ : ಅಕ್ಟೋಬರ್ 21: ಪುಟ 9)




Monday 5 September 2011

ಇಂದು ಮೈಸೂರು ನಗರ ಕಟ್ಟಿ ಬೆಳೆಸಿದ ಮಹನೀಯರಲ್ಲಿ ಒಬ್ಬರಾದ ಶ್ರೀ ಎಂ.ವೆಂಕಟಕೃಷ್ಣಯ್ಯ (ಮೈಸೂರು ತಾತಯ್ಯ ) ನವರ ಜನ್ಮದಿನ

ಮೈಸೂರು ಕಟ್ಟಿದ ತಾತಯ್ಯ - ವೃದ್ಧಪಿತಾಮಹ, ದಯಾಸಾಗರ ಪೂಜ್ಯ ಎಂ.ವೆಂಕಟಕೃಷ್ಣಯ್ಯ ಸ್ಮರಣೆ

ಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ,ಕಳಕಳಿ,ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ನಮ್ಮ ದೇಶದಲ್ಲಂತೂ ’ಸ್ವಂತಕ್ಕಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ’ ಎಂಬುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾನುಭಾವರ, ಧೀಮಂತರ ಪರಂಪರೆಯೇ ಇದೆ. ಆದರಿಂದು ಸಮಾಜದ ಪರಿಕಲ್ಪನೆಯನ್ನೇ ಮರೆತು ನಮ್ಮ ನಮ್ಮ ಸುತ್ತ ಸ್ವಾರ್ಥದ ಗೋಡೆಗಳನ್ನು ಕಟ್ಟಿಕೊಂಡಿರುವ ನಮಗೆ ಆ ಮಹನೀಯರ ಬದುಕು,ಆದರ್ಶಗಳ ನೆನಪೇ ಇಲ್ಲದಿರುವುದು ದುರಂತ.
ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ ’ಶಿಕ್ಷಣಕಾಶಿ’ ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ   ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ,ರಾಜಗುರು-ರಾಜನೀತಿಜ್ಞರಾಗಿ, ಆದರ್ಶ ಅಧ್ಯಾಪಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ,ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ.ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು ’ತಾತಯ್ಯ’ ನೆಂದು, ವೃದ್ಧಪಿತಾಮಹ,ದಯಾಸಾಗರ ಎಂದು ಕರೆದು ಗೌರವಿಸಿದ್ದು. ಮೈಸೂರಿನ ಇಂದಿನ ನಗರ ಬಸ್ ನಿಲ್ದಾಣದ ಎದುರಿಗಿರುವ ’ತಾತಯ್ಯ ಪಾರ್ಕ್’ ನಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪ್ರತಿಮೆಯನ್ನು ಸ್ಥಾಪಿಸಿ ಮೈಸೂರು ಮಹಾಜನತೆ ಅವರಿಗೆ ಗೌರವ ಸಮರ್ಪಿಸಿದೆ.

ವೆಂಕಟಕೃಷ್ಣಯ್ಯನವರ ಬದುಕನ್ನು ಬರೆಯುವುದೆಂದರೆ ಅದು ಒಂದೆರಡು ಶತಮಾನದ ಮೈಸೂರಿನ ಇತಿಹಾಸ ಬರೆಯುವಷ್ಟೇ ಸಾಹಸದ ಕೆಲಸ.ಅವರ ಇಡೀ ಜೀವನವೂ ಪೂರಾ ಹೋರಾಟದ ಬದುಕೇ ಆಗಿತ್ತು. ಸಾಂಸಾರಿಕ ಜೀವನದಲ್ಲಿ ಆರಂಭದಿಂದಲೇ ಬಡತನ,ದಾರಿದ್ರ್ಯ,ದುಃಖ ಸಂಕಟಗಳ  ಸರಮಾಲೆಯೇ ಅವರನ್ನು ಕಾಡಿಸಿದವು.ಅವರು ಎದೆಗುಂದದೆ ಅವೆಲ್ಲವನ್ನೂ ಧೀಮಂತರಾಗಿಯೇ ಎದುರಿಸಿದರು.ಜನಪರರ ದುಃಖ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತೀರಾ ತಾರುಣ್ಯದಲ್ಲಿಯೇ ಕಂಡುಕೊಂಡ ವೆಂಕಟಕೃಷ್ಣಯ್ಯ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳುವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ,ಮಹಾರಾಣಿ ಕಾಲೇಜ್,ಶಾರದಾವಿಲಾಸ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು.ಶಿಕ್ಷಣಕ್ಕೆ ಅಷ್ಟೇನು ಮಹತ್ವವೂ,ಅವಕಾಶವೂ ಇರದಿದ್ದ ಕಾಲದಲ್ಲಿ ತಾವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸ್ವತಃ ೩೫ ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ದಟ್ಟದರಿದ್ರರಾದ,ತಬ್ಬಲಿಗಳಾದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು.ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು.ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಗಾಂಧೀಜಿ ಹರಿಜನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಎಷ್ಟೋ ಮೊದಲು ಹರಿಜನರಿಗಾಗಿ ಹಾಸ್ಟೆಲುಗಳನ್ನು ತಾವೇ ತೆರೆದು ಮೈಸೂರು ಸಂಸ್ಥಾನದ ನಾನಾ ಕಡೆ ಅವರಿಗಾಗಿ ವೃತ್ತಿ ಶಿಕ್ಷಣ ಶಾಲೆಗಳನ್ನು ಸರ್ಕಾರದಿಂದ ತೆರೆಸಿದ ಕೀರ್ತಿ ಅವರದು.ಅಶಕ್ತ ಪ್ರ್ರಾಣಿಗಳಿಗಾಗಿ ಪಿಂಜರಾಪೋಲನ್ನು ಸ್ಥಾಪಿಸಲು ನೆರವಾದರು.’ಮೈಸೂರು ಪತ್ರಿಕೋದ್ಯಮ ಪಿತಾಮಹ’ರಾಗಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿ ಜನಜಾಗೃತಿ ಉಂಟುಮಾಡಿದರು.ಪ್ರಜಾಪ್ರತಿನಿಧಿ ಸಭೆ,ನ್ಯಾಯವಿಧಾಯಕ ಸಭೆ ,ಪೌರಸಭೆ ಮತ್ತು ಎಕನಾಮಿಕ್ ಕಾನ್ಫರೆನ್ಸ್ ಗಳಲ್ಲಿ  ಸದಸ್ಯರಾಗಿ ಪ್ರಜೆಗಳ ಪ್ರತಿನಿಧಿಯಾಗಿ ವಿರೋಧಪಕ್ಷವಾಗಿ ಜನಪರವಾಗಿ ದುಡಿದರು.ಸುಮಾರು ೫೦ ವರ್ಷಕ್ಕೂ ಮೇಲ್ಪಟ್ಟು ಸಂಪೂರ್ಣ ಸಮಾಜದ ಏಳಿಗೆಗಾಗಿ ಅಹರ್ನಿಶಿ ಸೇವೆ ಸಲ್ಲಿಸಿದರು.ತಮ್ಮ ಪತ್ರಿಕಾ ವೃತ್ತಿಯಿಂದಾಗಿ,ಸಾರ್ವಜನಿಕ ಜೀವನದಿಂದಾಗಿ ಅವರು ತಮ್ಮ ಮನೆ ಹೊಲ ಎಲ್ಲ ಮಾರಿಕೊಳ್ಳಬೆಕಾಯಿತು.ಆದರೆ ಯಾವುದರಿಂದಲೂ ಧೃತಿಗೆಡದೆ,ಅನ್ಯಾಯದೊಂದಿಗೆ ರಾಜಿಮಾಡಿಕೊಳ್ಳದೆ ಬಡವರ ನಿಸ್ಸಹಾಯಕರ ಸೇವೆಯನ್ನು ಕೊನೆಯುಸಿರೆಳೆವವರೆಗೂ ವ್ರತವಾಗಿ ಸ್ವೀಕರಿಸಿ ಸಮಾಜಕ್ಕಾಗಿ ಧೀಮಂತ ಸೇವೆ ಸಲ್ಲಿಸಿದ ಶ್ರೇಷ್ಠ ಕರ್ಮಯೋಗಿ ಶ್ರೀ ಎಂ.ವೆಂಕಟಕೃಷ್ಣಯ್ಯನವರು.


೧೮೪೪ ರಲ್ಲಿ ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಜನಿಸಿದ ವೆಂಕಟಕೃಷ್ಣಯ್ಯ ಬಾಲ್ಯದಿಂದಲೇ ಬಡತನವನ್ನು ಬಳುವಳಿಯಾಗಿ ಪಡೆದಿದ್ದರು. ಅವರು ಓದಿದ್ದು ಮೆಟ್ರಿಕ್ಯುಲೇಶನ್ ಅಷ್ಟೆ.ಆದರೂ ವಿದ್ವತ್ಪೂರ್ಣ ಶಿಕ್ಷಕರಾಗಿ ಮರಿಮಲ್ಲಪ್ಪ ಶಾಲೆ,ಸದ್ವಿದ್ಯಾ ಶಾಲೆಗಳಲ್ಲಿ ಸುಮಾರು ೪೦ ವರ್ಷಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಸಾಮಾಜಿಕ ಜಾಗೃತಿಗಾಗಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು.ಕನ್ನಡದಲ್ಲಿ ಸ್ವತಂತ್ರ ಪತ್ರಿಕೆಗಳೇ ಇಲ್ಲದಿದ್ದ ಕಾಲದಲ್ಲಿ ಸಾಧ್ವಿ,ಉದಯ ಚಿಂತಾಮಣಿ,ವಿದ್ಯಾದಾಯಿನಿ,ವೃತ್ತಾಂತ ಚಿಂತಾಮಣಿ,ಹಿತಭೋದಿನಿ,ಸಂಪದಭ್ಯುದಯ, ಮುಂತಾದ ಕನ್ನಡ ಪತ್ರಿಕೆಗಳನ್ನು,
Wealth of Mysore, Mysore Patriot,The civil and social journal, Nature cure   ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿ ಜನಜಾಗೃತಿಯನ್ನುಂಟುಮಾಡಿದರು.ಜನಪರವಾಗಿದ್ದ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾರಣಕ್ಕೆ ಇವರ ಅನೇಕ ಪತ್ರಿಕೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮುಟ್ಟುಗೋಲಾದವು.ತಮ್ಮ ಪತ್ರಿಕೆಗಳ ಮೂಲಕ ನಿರ್ಭಯವಾಗಿ ಆಳುವವರ ಅನ್ಯಾಯಗಳನ್ನು ಹೊರಹಾಕಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಜಾಗೃತಿಯನ್ನು ಉಂಟುಮಾಡುತ್ತಿದ್ದ ವೆಂಕಟಕೃಷ್ಣಯ್ಯನವರು ಆ ಮೂಲಕ ’ಕನ್ನಡ ಪತ್ರಿಕಾ ಪಿತಾಮಹ’ ಎಂಬ ಕೀರ್ತಿಗೆ ಭಾಜನರಾದರು.ಜೊತೆಗೆ ಸಾಹಿತಿಗಳೂ, ವಿದ್ವಾಂಸರೂ ಆಗಿದ್ದ ತಾತಯ್ಯ ಅರ್ಥಸಾಧನ, ದೇಶಾಭಿಮಾನ,ವಿದ್ಯಾರ್ಥಿ ಕರಭೂಷಣ, ಆರೋಗ್ಯಸಾಧನ ಪ್ರಕಾಶಿಕೆ, ಹರಿಶ್ಚಂದ್ರ ಚರಿತ್ರೆ ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ.ಕನ್ನಡ ಸಾಹಿತ್ಯ ಪರಂಪರೆಗೆ ಗಣನೀಯ ಕೊಡುಗೆ ಸಲ್ಲಿಸಿರುವ ಶ್ರೀ ವೆಂಕಟಕೃಷ್ಣಯ್ಯನವರನ್ನು ೧೯೨೨ ರಲ್ಲಿ ದಾವಣಗೆರೆಯಲ್ಲಿ ನಡೆದ ೮ ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು. 
ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಕನ್ನಡ ನಾಡಿಗೆ ಅದ್ವಿತೀಯ ಕೊಡುಗೆ ನೀಡುವಲ್ಲಿ ತಾತಯ್ಯನವರ ಪಾತ್ರ ಬಹು ಮುಖ್ಯವಾದುದು. ಆಗ ಬೊಂಬಾಯಿ ಸರ್ಕಾರದಲ್ಲಿ  ಚೀಫ಼್ ಇಂಜಿನಿಯರ್ ಆಗಿದ್ದ  ವಿಶ್ವೇಶ್ವರಯ್ಯನವರ ಬುದ್ದಿವಂತಿಕೆ,ಕಾರ್ಯದಕ್ಷತೆಗಳು ಅವರದೇ ನಾಡಾದ ಮೈಸೂರಿಗೇ ಲಭಿಸಬೇಕೆಂದು ಮಹಾರಾಜರಿಗೆ ಪತ್ರ ಬರೆದು ,ಅನುಮತಿ ಪಡೆದು  ವಿಶ್ವೇಶ್ವರಯ್ಯನವರು ಮೈಸೂರಿಗೆ ಮರಳುವಂತೆ ಮನವೊಲಿಸಿ ಕರೆತಂದವರು ತಾತಯ್ಯ.

ಸ್ವಾಮಿ ವಿವೇಕಾನಂದರು,ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ರು ,ಮಹಾತ್ಮಾ ಗಾಂಧೀಜಿ,ಜವಾಹರಲಾಲ್ ನೆಹರು ಮುಂತಾದ ಮಹನೀಯರು ತಾತಯ್ಯನವರನ್ನು ಭೇಟಿಯಾಗಿ ಅವರ ಸಮಾಜಕಾರ್ಯಗಳನ್ನು ಪ್ರಶಂಶಿಸಿದ್ದಾರೆ.೧೯೨೭ರಲ್ಲಿ ಅನಾಥಾಲಯಕ್ಕೆ ಭೇಟಿ ನೀಡಿದ್ದ ಗಾಂಧೀಜಿಯವರು ವೆಂಕಟಕೃಷ್ಣಯ್ಯನವರನ್ನು ಆತ್ಮೀಯತೆಯಿಂದ ಆಲಂಗಿಸಿಕೊಂಡು ’ಮೈಸೂರಿನ ಭೀಷ್ಮ’ ಎಂದು ಸಂಭೋಧಿಸಿ ಗೌರವಿಸಿದ್ದಾರೆ. ’ಸುಖದಲ್ಲಿ ಕಷ್ಟದಲ್ಲಿ ಅಚಲವಾಗಿ ನಿಂತು ರಾಷ್ಟ್ರದ ಏಳಿಗೆಗಾಗಿ ದುಡಿದ ರಾಷ್ಟ್ರ ವೀರರೆಂದರೆ ಪೂಜ್ಯ ವೆಂಕಟಕೃಷ್ಣಯ್ಯನವರು’ ಎನ್ನುತ್ತಾರೆ ಅವರ ಶಿಷ್ಯರು, ಒಡನಾಡಿಗಳಲ್ಲೊಬ್ಬರಾದ ನಾಡಿನ ಶ್ರೇಷ್ಟ ಕವಿ ಡಿ.ವಿ.ಜಿಯವರು.   
ವೆಂಕಟಕೃಷ್ಣಯ್ಯನವರು ೧೮೯೬ ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ ’ಅನಾಥಾಲಯ’ ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.ಅವರು ಪ್ರೇರಣೆ ನೀಡಿ ಕಟ್ಟಿ ಬೆಳೆಸಿದ ಮಹಾರಾಣಿ ಶಾಲೆ , ಮರಿಮಲ್ಲಪ್ಪ ಶಾಲೆ ,ಸದ್ವಿದ್ಯಾ ಹಾಗೂ ಶಾರದಾವಿಲಾಸ ಶಾಲೆಗಳು ಇಂದು ನಾಡಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾಗಿವೆ. ಲಕ್ಷಾಂತರ ಜನರಿಗೆ ಅಕ್ಷರಜ್ಞಾನದ ಬೆಳಕು ನೀಡುತ್ತಿವೆ.     
ವೆಂಕಟಕೃಷ್ಣಯ್ಯನವರಂತಹ ಅಪ್ರತಿಮ ದೇಶಭಕ್ತ,ಧೀಮಂತ ರಾಜಕಾರಣಿ, ಪ್ರಾಮಾಣಿಕ ಪ್ರಜಾ ಸೇವಕ, ಸಾಮಾಜಿಕ ಜಾಗೃತಿಯ ಹರಿಕಾರ , ಲೋಕಹಿತಚಿಂತಕನ ಜೀವನ-ಸಾಧನೆಗಳ ಅಧ್ಯಯನ ನಮ್ಮೆಲ್ಲರ ಬದುಕಿಗೆ ದಾರಿದೀಪ,ಒಂದು ಮಹತ್ತರ ಮಾರ್ಗದರ್ಶಿ.

(ಗ್ರಂಥ ಋಣ: ಶ್ರೀ ಲ.ನ.ಶಾಸ್ತ್ರಿಯವರ ಜಾಗೃತಿಯ ಹರಿಕಾರ ವೆಂಕಟಕೃಷ್ಣಯ್ಯ )

ಸೆಪ್ಟೆಂಬರ್ ೧೧ರ ಭಾನುವಾರ ಸಂಜೆ ೪ ಕ್ಕೆ  ಮೈಸೂರಿನ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ತಾತಯ್ಯನವರ ಅಭಿಮಾನಿಗಳು ಹಾಗೂ ಮೈಸೂರಿನ ತಾತಯ್ಯ ವಿಚಾರ ವೇದಿಕೆ ತಾತಯ್ಯನವರ ಕುರಿತ ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಹಿರಿಯ ಕಾದಂಬರಿಕಾರ ಡಾ|| ಎಸ್.ಎಲ್.ಭೈರಪ್ಪ ನವರು ತಾತಯ್ಯನವರ ಕುರಿತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಿದ್ದಾರೆ.

Tuesday 9 August 2011

ನವೀನ್ ಗಂಗೋತ್ರಿಯ ಒಂದು ವಿಚಾರಪೂರ್ಣ ಲೇಖನ - ಉದಯವಾಣಿಯಲ್ಲಿ

ನಮ್ಮ ಬಳಗದ ಬರಹಗಾರ ಗೆಳೆಯ ನವೀನ ಭಟ್ ಗಂಗೋತ್ರಿಯ ಒಂದು ವಿಚಾರಪೂರ್ಣ ಲೇಖನ: ಆಗಸ್ಟ್ 9 ರ 'ಉದಯವಾಣಿ' ಪತ್ರಿಕೆಯಲ್ಲಿ. ಪತ್ರಿಕೆ ಇದನ್ನು ಪ್ರಕಟಿಸಿದ ರೀತಿ ಹಾಗೂ ಅದಕ್ಕೆ ಹಾಕಿರುವ ಚಿತ್ರ ಎರಡೂ ಅಸಂಬದ್ಧ ಎನ್ನಿಸಿದರೂ ಲೇಖನ ಮಾತ್ರ ಚಿಂತನೆಗೆ ಹಚ್ಚುತ್ತದೆ.
ನವೀನ ಗಂಗೋತ್ರಿ-ಲೇಖನ-ಉದಯವಾಣಿ-ಆಗಸ್ಟ್ ೯,೨೦೧೧ 

Wednesday 3 August 2011

ಗೆಳೆಯರು ಬರೆಯುತ್ತಿದ್ದಾರೆ : ಅವರಿನ್ನೂ ಬೆಳೆಯಲಿ

ನಮ್ಮ ಚೈತ್ರರಶ್ಮಿಯ ಕನಸಿರುವುದೇ ಗ್ರಾಮೀಣ ಹಾಗೂ    
ಅವಕಾಶ ವಂಚಿತ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಹಾಗೂ ಅದರ ಯಶಸ್ಸಿರುವುದೇ ಆ ಎಲ್ಲ ಪ್ರತಿಭಾವಂತರ ಯಶಸ್ಸುಗಳಲ್ಲಿ : ಹಾಗಂತ ನಾನು ನಂಬಿದ್ದೇನೆ. ಬಳಗದ ಗೆಳೆಯರು ಅಂತಲ್ಲ , ನನ್ನ ಸುತ್ತಮುತ್ತಲಿನ ಯಾರೇ ಆಗಲಿ, ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡಿದಾಗ ನಾನು ಪ್ರಾಮಾಣಿಕವಾಗಿ ಖುಷಿಪಟ್ಟಿದ್ದೇನೆ, ಮಾತ್ರವಲ್ಲ ಆ ಸಂತಸವನ್ನು ನನ್ನ ಸಂಪರ್ಕದ ಬಹುತೇಕರಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಅದರ ಉದ್ದೇಶ  ಆ ಮೂಲಕ ಅವರೆಲ್ಲರಿಗೆ ಪ್ರೋತ್ಸಾಹ ಸಿಗಲಿ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದಷ್ಟೇ. ಎರಡೇ ಸಾಲಿನ ಪ್ರೋತ್ಸಾಹದ ಮಾತು ಅದೆಷ್ಟು ಶಕ್ತಿ ತುಂಬಬಲ್ಲುದು ಎಂಬ ಅರಿವಿದೆ ನನಗೆ. ಚೈತ್ರರಶ್ಮಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರೆ ಬಳಗಕ್ಕೆ ಬಂದ ಗೆಳೆಯರು ತುಂಬಾ ಬರೆಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ. ಹೌದು ಅವರು ಇನ್ನಷ್ಟು ಬರೆಯಲಿ, ಮತ್ತಷ್ಟು ಬೆಳೆಯಲಿ. ಎಲ್ಲ ಗ್ರಾಮೀಣ ಪ್ರತಿಭಾವಂತರ ನಗುವಿನಲ್ಲಿ ನಮ್ಮ ಚೈತ್ರರಶ್ಮಿಯ ಗೆಲುವಿದೆ.

ಬಳಗದ ಗೆಳೆಯರ ಒಂದಷ್ಟು ಇತ್ತೀಚಿನ ಪ್ರಕಟಗೊಂಡ ಲೇಖನಗಳು:

  • ನಮ್ಮ ಬಳಗದ ಬರಹಗಾರ,  ವಕ್ರೋಕ್ತಿ  ಚತುರ, ಕನ್ನಡಪ್ರಭ ದಿನಪತ್ರಿಕೆಯ 'ಪದಪದರ ' ಅಂಕಣದ ಅಂಕಣಕಾರ ವಿಶ್ವನಾಥ ಸುಂಕಸಾಳ ರ ಲೇಖನ ಆಗಸ್ಟ್ ೩ ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ : 
  • http://www.kannadaprabha.com/pdf/epaper.asp?pdfdate=8/3/2011  

ವಿಶ್ವ ಸುಂಕಸಾಳ ಲೇಖನ-ಕನ್ನಡಪ್ರಭ-ಆಗಸ್ಟ್ 3
  •  ನಮ್ಮ ಚೈತ್ರರಶ್ಮಿ ಬಳಗದ ಸಂಚಾಲಕರು ಹಾಗೂ ಗೋವಾ ಕನ್ನಡ ಜನನುಡಿ ಪತ್ರಿಕೆಯ ಸಂಪಾದಕರಾದ ಶ್ರೀ ಮಹಾಬಲ ಭಟ್ ರವರ ಲೇಖನ ಹೊಸದಿಗಂತ ಪತ್ರಿಕೆಯಲ್ಲಿ :

ಮಹಾಬಲ ಭಟ್ ಲೇಖನ-ಹೊಸದಿಗಂತ 
  •  ನಮ್ಮ ಬಳಗದ ಬರಹಗಾರ, ಅಮೇರಿಕ ಕನ್ನಡ ಒಕ್ಕೂಟ - 'ಅಕ್ಕ' ಕಥಾಸ್ಪರ್ಧೆ ಪ್ರಥಮ ಬಹುಮಾನ ವಿಜೇತ ಕಥೆಗಾರ ನವೀನ ಭಟ್ ಗಂಗೋತ್ರಿ ಯವರ ಕಥೆ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ :


  • ಕನ್ನಡಪ್ರಭ 'ಪ್ರೇಮಪತ್ರ ಸ್ಪರ್ಧೆ' ಯಲ್ಲಿ ಬಳಗದ ಶ್ರೀಮತಿ ರೇವತಿ ಶೆಟ್ಟಿ ಹಾಗೂ ಶ್ರೀಮತಿ ಕಮಲ.ಎಂ (ಸುಧಾ ಹೆಗಡೆ) ಅವರ ಬರಹಗಳು ಅಂತಿಮ ೨೫ ರಲ್ಲಿ ಆಯ್ಕೆ. ಸಾಹಿತ್ಯ ಪ್ರಕಾಶನ ಹೊರತರುವ ಪುಸ್ತಕದಲ್ಲಿ ಇವರ ಪ್ರೇಮಪತ್ರಗಳು ಪ್ರಕಟವಾಗಲಿವೆ. ಕನ್ನಡಪ್ರಭ -ಸಾಪ್ತಾಹಿಕದಲ್ಲಿ ಪ್ರಕಟಗೊಂಡ ರೇವತಿ ಅವರ ಬರಹ.
ರೇವತಿ ಶೆಟ್ಟಿ ಅವರ ಬರಹ -ಕನ್ನಡಪ್ರಭ ಸಾಪ್ತಾಹಿಕ
 ಈ ಎಲ್ಲ ಗೆಳೆಯರಿಗೆ ಅಭಿನಂದನೆಗಳು. ಮತ್ತೆ ಮತ್ತೆ ಇಂತಹ ಅಭಿನಂದನೆಗಳನ್ನು ಹಂಚಿಕೊಳ್ಳುವ ಕಾಲ ಬರುತ್ತಲೇ ಇರಲಿ.
  

ಒಂದು ಸಂತಸದ ಮಿಂಚು: ಹನುಮಂತ್ ಹಲಿಗೇರಿಗೆ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ 
 
ಹನುಮಂತ್ ಹಲಿಗೇರಿ
ನಮ್ಮ ಬಳಗದ ಗೆಳೆಯ , ಕಥೆಗಾರ ಹನುಮಂತ್ ಹಲಿಗೇರಿ ಯವರ 'ಕತ್ತಲ ಗರ್ಭದ ಮಿಂಚು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ ಲಭಿಸಿದೆ. ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬಳಗಕ್ಕೆ ಪರಿಚಿತರಾದ ಹನುಮಂತ್ ಮೂಲತಃ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದವರು. ಬಿ .ಎ ಓದುತ್ತಿರುವಾಗಲೇ ಗ್ರಾಮೀಣೋದ್ಧಾರದ ಹುಚ್ಚು ಹತ್ತಿಸಿಕೊಂಡು ಊರೂರು ಅಲೆದವರು. ಧಾರವಾಡ ದ ಕರ್ನಾಟಕ ವಿವಿ ಯಿಂದ 'ಐ.ಎಲ್.ಆರ್.ಡಿ' ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಪದವಿ ಪಡೆದು ನಂತರ ಗಾಂಧೀಜಿಯವರ ನೇರ ಅನುಯಾಯಿ ಮಣಿಭಾಯಿ ದೇಸಾಯಿಯವರ 'ಭೈಫ್' ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ವಾರ್ತಾಭಾರತಿ' ಪತ್ರಿಕೆಯಲ್ಲಿ ಉಪಸಂಪಾದಕರು. 

ಬರವಣಿಗೆಯ ಹೆಜ್ಜೆಗುರುತುಗಳು:
  • ೨೦೦೮ರಲ್ಲಿ  "ದೇವರ ಹೆಸರಲ್ಲಿ" ನಾಟಕವು ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯಿಂದ ಸಹಾಯಧನವನ್ನು ಪಡೆದುಕೊಂಡು ಪ್ರದರ್ಶನಗೊಂಡಿದೆ.
  •  ೨೦೦೮ರ  "ಮೊಹರಂ" ಕತೆ ವಿಕ್ರಾಂತ್ ಕರ್ನಾಟಕ ಪತ್ರಿಕೆಯ ಗಾಂಧೀ ಕಥಾಸ್ಪರ್ಧೆಯಲ್ಲಿ  ಆಯ್ಕೆಯಾಗಿ ಪ್ರಕಟಗೊಂಡಿದೆ. ೨೦೧೦ರ ಹೂಸದಿಗಂತದ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನ ಕತ್ತಲೆಯೂಳಗಿನ "ಮಿಣುಕು' ದ್ವೀತಿಯ ಬಹುಮಾನ
  • ೨೦೧೦ ರ ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ.  
  • 'ಊರು ಸುಟ್ಟರೂ ಹನುಮಪ್ಪ ಹೊರಗ' ಕಥೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕಥಾಸ್ಪರ್ಧೆಯಲ್ಲಿ ಪ್ರಥಮ ೫೦೦೦ ರೂ ನಗದು ಬಹುಮಾನ.
  • 'ಕತ್ತಲ ಗರ್ಭದ ಮಿಂಚು' ಚೊಚ್ಚಲ ಕಥಾ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನದೊಂದಿಗೆ ಪ್ರಕಟ-೨೦೧೧ 
  • 'ಕತ್ತಲ ಗರ್ಭದ ಮಿಂಚು' ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ.
ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಭರವಸೆ ಹುಟ್ಟಿಸಿರುವ ಗ್ರಾಮೀಣ ಪ್ರತಿಭಾವಂತ ಗೆಳೆಯ ಹನುಮಂತ್ ಗೆ ಚೈತ್ರರಶ್ಮಿ ಬಳಗದ ಶುಭಹಾರೈಕೆಗಳು. ಅವರ ಸಾಹಿತ್ಯದ ಅರಿವು, ಹರವು ಇನ್ನಷ್ಟು ವಿಸ್ತರಿಸಲಿ. ಅಭಿನಂದನೆಗಳು ಹನುಮಂತ್.


Tuesday 2 August 2011

ನನಗಿಷ್ಟವಾದ ಒಂದು ರಾಷ್ಟ್ರ ಜಾಗೃತಿಯ ಮಾಹಿತಿಪೂರ್ಣ ಲೇಖನ : 

ಡಾ.ಸೂರ್ಯನಾಥ ಕಾಮತ್ : ವಿಜಯ ಕರ್ನಾಟಕ :ಆಗಸ್ಟ್ ೨, ೨೦೧೧ : ಓದಿ, ನಿಮಗೂ ಇಷ್ಟವಾಗಬಹುದು.  

ತಿಲಕರ ಕುರಿತು ಸೂರ್ಯನಾಥ ಕಾಮತರ ಲೇಖನ -ವಿಜಯ ಕರ್ನಾಟಕ-ಆಗಸ್ಟ್ ೨ 
ಸಮಾಜ ಸೇವಕರ ದಿನಾಚರಣೆಯ ಕಾರ್ಯಕ್ರಮ: ಆಗಸ್ಟ್ ೧, ೨೦೧೧ : ಛಾಯಾಚಿತ್ರಗಳು 

ವೇದಿಕೆಯಲ್ಲಿ ಶ್ರೀ ತಿಪ್ಪೇಸ್ವಾಮಿ, ಡಾ.ಸಿ.ಎನ್.ರಾಮಚಂದ್ರನ್, ಶ್ರೀ ರುದ್ರಸ್ವಾಮಿ

ಡಾ.ಸಿ.ಎನ್.ರಾಮಚಂದ್ರನ್ ಉದ್ಘಾಟನೆ

ಸನ್ಮಾನಿತರು: ಶ್ರೀ ತಿಪ್ಪೇಸ್ವಾಮಿ
ಸನ್ಮಾನಿತರು: ಶ್ರೀ ರುದ್ರಸ್ವಾಮಿ

ಶ್ರೀ ಸಿ.ಎನ್.ಆರ್ ಅವರಿಗೆ ಗೌರವ
ಶ್ರೀ ಸಿ.ಎನ್.ಆರ್ ಮಾತು

ವೇದಿಕೆಯಲ್ಲಿ ಶ್ರೀ ತಿಪ್ಪೇಸ್ವಾಮಿ, ಡಾ.ಸಿ.ಎನ್.ರಾಮಚಂದ್ರನ್, ಶ್ರೀ ರುದ್ರಸ್ವಾಮಿ





ಜನಪದ ಗಾಯನ: ಸಾತ್ವಿಕ  ತಂಡ
ಶ್ರೀ ತಿಪ್ಪೇಸ್ವಾಮಿ ಮಾತು


ಶ್ರೀ ರುದ್ರಸ್ವಾಮಿ- ಕನ್ನಡ ಕಲಿಕಾ ಪ್ರಾತ್ಯಕ್ಷಿಕೆ